ಬದುಕಿನ ಹುಡುಕಾಟದಲ್ಲಿ , ಜಾರಿದ ಕಣ್ಣಿರಲ್ಲಿ
ನೋವಿನ ಸರಪಳಿ ಅಪ್ಪಿ ಮಿಸುಕಾಡಲು ಬಿಡದೆ
ದಿನ- ದಿನ ಅಧಿಕ , ಸಹಿಸಲಾರದ ಬಾಧೆಯಲ್ಲಿ
ಸಂಬಂಧಗಳ ಕೊಂಡಿ ಕಳಚದೆ
ಭಾವನೆಗೆ ಸ್ಪಂದಿಸಲು , ಹೊಸ ಮಾರ್ಗದಲ್ಲಿ
ಕಮರಿದ ಕನಸಿಗೆ , ಜೀವಸೆಲೆ ನೀಡಲಾಗದೆ
ಸ್ವಚ್ಛ ಮನಸಿನ ಕನ್ನಡಿಯು ಅನುಮಾನದಲ್ಲಿ
ಸಾಗರದಾಚೆ ಸೇರಲು ಆಗದೆ
ಮನಸಿನ ಬಿಗುಮಾನ , ದರ್ಪದಲ್ಲಿ
ಸೋಲದ ಹಟದ ಜಾಣತನದಲ್ಲಿ
ಹೃದಯದ ಮೌನ ವೇದನೆಯಲ್ಲಿ
ಚಿವುಟಿದ ಕರಾಳ ಮುಖದಿ
ಯಾರ ಅನುಮಾನವೋ , ಯಾರ ಅರಿಕೆಯೋ
ತಪ್ಪು ನಡೆದಿದೆ , ವಿಧಿಯ ಇಚ್ಚೆಯಂತೆ
ಮನಸುಗಳು ದೂರ ದೂರ
ಸನಿಹದ ಮಾತು , ಬಡವಾಗಿದೆ
ನೋವ ಹೇಳಲು ಬಂದ ಜೀವಕೆ
ಕಾರಣವೇ ತಿಳಿಯದೆ , ಸುಸ್ತಾಗಿದೆ
ಸ್ನೇಹದ ಸೌಧ ಕುಸಿದಿದೆ
ಚಿಕ್ಕ ತಪ್ಪು ಗೃಹಿಕೆಯಿಂದ..
ದೇವರ ಸಂಕಲ್ಪ ಹೇಗಿದೆಯೋ
ವಿಶಾಲ ಜೀವನದಲ್ಲಿ
ಹೆಜ್ಜೆಗುರುತುಗಳು ಅಮೂಲ್ಯ
ಎಲ್ಲ ಜ್ಞಾನದ ಸಂಕೇತ ....
....ಮನಸಿನ ಚಿತ್ರಪಟದಲ್ಲಿ ನಾವು ಎಣಿಸಿರುವುದೇ ಒಂದು ,ವಿಧಿಯ ಕೈವಾಡವೇ ಇನ್ನೊಂದು ,.. ಅರಿತೋ ಅರಿಯದೆಯೋ ಜೀವನದಲ್ಲಿ ಅಲ್ಲಲ್ಲಿ ಅನುಮಾನಗಳು , ತಪ್ಪು ಕಲ್ಪನೆ ಹುಟ್ಟುವುದು ಸಹಜ .. ಇವುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸ್ನೇಹ ..... ಮಾಲಿನಿ ಭಟ್ .......................